ಡಿ.ವಿ. ಗುಂಡಪ್ಪನವರನ್ನು ಆಧುನಿಕ ಕನ್ನಡ ಸಾಹಿತ್ಯದ ನವರತ್ನಗಳಲ್ಲಿ ಒಬ್ಬರೆಂದು ಯು.ಆರ್. ಅನಂತಮೂರ್ತಿಗಳು ಗುರುತಿಸಿರುವುದು ಸರಿಯಾಗಿಯೇ ಇದೆ. ಅವರು ಪ್ರತಿಪಾದಿಸಿದ ವಿಚಾರ, ನಡೆದು ಹೋದ ದಾರಿ-ಎರಡೂ ಧೀಮಂತ ಮತ್ತು ಉದಾರ. ಕನ್ನಡ ಗದ್ಯಕ್ಕೊಂದು ಅನನ್ಯ ಸೊಗಸು ತಂದ ಡಿವಿಜಿ ಇದ್ದಿದ್ದರೆ, ಈ 17ಕ್ಕೆ 125 ವರ್ಷವಾಗುತ್ತಿತ್ತು.
‘ಆರಿಸಿದ ಯಾವುದೇ ಗುಂಪಿನ ಉಲ್ಲಾಸವಂತ ಸದಸ್ಯ’ ಎಂದು ಮಾಸ್ತಿಯವರು ಡಿವಿಜಿ ಬಗೆಗೆ ಹೇಳಿದ್ದಾರೆ. ಡಿವಿಜಿ ವ್ಯಕ್ತಿತ್ವವೇ ಅಂಥದು. ಎಲ್ಲರೊಡನೆ ಬೆರೆಯುವಂಥದು. ಭಾರತ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದರು. ಅಭಿಪ್ರಾಯ ಸ್ವಾತಂತ್ರ್ಯದ ಅಗತ್ಯವನ್ನು ಎಲ್ಲ ಕಾಲದಲ್ಲೂ ಎತ್ತಿ ಹಿಡಿದು ಬೆಂಗಳೂರಿನ ಇಂಗ್ಲಿಷ್ ರೆಸಿಡೆಂಟರ ಕೋಪಕ್ಕೆ ಗುರಿಯಾಗಿದ್ದರು. ಪೋಲೆಪಲ್ಲಿ ಚಿನ್ನಪ್ಪಶೆಟ್ಟಿ, ಸೊಣ್ಣೇಗೌಡ, ಕಾಷ್ಠಿ ಹೈದರ್ಸಾಬ್ ಅವರೊಂದಿಗೆ ಬೆರೆತಂತೆಯೇ ಮಿರ್ಜಾ ಇಸ್ಮಾಯಿಲ್, ಸರ್. ಎಂವಿ, ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿ ಮೊದಲಾದವರೊಂದಿಗೆ ಚರ್ಚೆ ನಡೆಸುವ ಸಂವಾದ ಕುಶಲಿಗಳಾಗಿದ್ದರು. ತಾವು ತರುತ್ತಿದ್ದ ಒಂದು ಪತ್ರಿಕೆಗೆ ‘ಸಾರ್ವಜನಿಕ’ ಎಂದೇ ಹೆಸರಿಟ್ಟಿದ್ದರು. ಡಿವಿಜಿ ಉಲ್ಲಾಸವಂತರಾದ ಶಿಷ್ಯರನ್ನೂ ಗೆಳೆಯರನ್ನೂ ಚಿಂತಕರನ್ನೂ ತಯಾರು ಮಾಡಿದ್ದರು.
‘ಯಾವ ವಾಕ್ಯ ಸರಣಿಯೀಂದ ಕೇಳಿದವನ ಅಥವಾ ಓದಿದವನ ಹೃದಯಕ್ಕೆ ಒಂದು ಹಿತಾನುಭಾವವೂ, ಅವನ ಬುದ್ಧಿಗೆ ಒಂದು ಬೆಳಕೂ, ಅವನ ಜೀವನಕ್ಕೆ ಒಂದು ಸತ್ ಪ್ರಚೋದನೆಯೂ ಉಂಟಾಗುತ್ತದೆಯೋ ಅದು ಸಾಹಿತ್ಯ’ ಎನ್ನುವುದು ಡಿವಿಜಿಯವರೇ ಹೇಳಿರುವ ಮಾತು. ಅವರ ಸಾಹಿತ್ಯ ಲೋಕಚಿಂತನೆಯಿಂದ ಕೂಡಿತ್ತು ಎನ್ನುವುದಕ್ಕೆ ಈ ಮಾತೇ ಸಾಕು. ‘ಜ್ಞಾನಿನಾಚರಿತುಂ ಶಕ್ಯಂ ಸಮ್ಯಗ್ ರಾಜ್ಯಾದಿ ಲೌಕಿಕಂ’ ಎಂಬ ವಿದ್ಯಾರಣ್ಯರ ಮಾತೇ ಅವರ ಘೋಷವಾಕ್ಯ. ಎಲ್ಲ ಜನರೂ ಧೀಮಂತರಾಗಿ ಬೆಳೆಯಬೇಕು ಎಂಬುದು ಅವರ ಆಕಾಂಕ್ಷೆಯಾಗಿತ್ತು.
ಡಿವಿಜಿ ಬುದ್ಧಿವಂತರ ಜಾತಿ ಮತ್ತು ಹೃದಯವಂತರ ಜಾತಿಗಳನ್ನು ಗುರುತಿಸಿದ್ದರು. ಆದರೆ, ಇದರಲ್ಲಿ ಹೃದಯವಂತರೇ ನಿರ್ಣಾಯಕ ಎಂದು ಅವರು ತೀರ್ಮಾನಿಸಿದ್ದರು. ಏಕೆಂದರೆ ಅವರ ದೃಷ್ಟಿಯಲ್ಲಿ ವಿದ್ವತ್ತೆಂದರೆ ಪುಸ್ತಕ ಪಾಂಡಿತ್ಯ, ಸಂಸ್ಕೃತಿ ಎಂದರೆ ಜೀವನದ ಅಂತರಂಗದ ಸೊಗಸು. ಮನುಷ್ಯನಿಗೆ ಸಮಾಜದೊಂದಿಗೆ ಸಂಪರ್ಕವಿರಬೇಕೆನ್ನುವುದು ಡಿವಿಜಿ ಪ್ರತಿಪಾದಿಸಿದ ಮಹಾತತ್ವ. ಹಾಗಿಲ್ಲದಿದ್ದರೆ ಬದುಕು ವ್ಯರ್ಥವೆಂದು ಅವರು ಬಗೆದಿದ್ದರು. ಇದಕ್ಕೆ ಅವರ ‘ಮಂಕುತಿಮ್ಮನ ಕಗ್ಗ’ದ ತೊಲಗೆಲವೊ ಮನೆಯಿಂದ ಮನವು ಬರಡಾದಂದು/ ಹೊಸಲ ತೊಳೆಯಲು ತೋಳ್ಗೆ ಬಲ ಕುಗ್ಗಿದಂದು /ತೊಲಗು ಜಗದಿಂ ದೂರ ಇಳೆಗಾಗದಿರು ಭಾರ /ತೊಲಗಿ ನೀಂ ಮರೆಯಾಗು ಮಂಕುತಿಮ್ಮ ಎನ್ನುವ ಒಂದು ಪದ್ಯವನ್ನು ನೋಡಬಹುದು.
ನಾವು ಹುಡುಗರಾಗಿದ್ದಾಗ ನಾಡಗೀತೆ ಎಂಬ ಕೀರ್ತಿಗೆ ಪಾತ್ರವಾಗಿದ್ದೆಂದರೆ ಡಿವಿಜಿಯವರ ಪದ್ಯ ‘ನಿವೇದನೆ’. ಅದರಲ್ಲಿ ಎಲೆಯ ಹಿಂದೆ ಇದ್ದು ಸುವಾಸನೆಯನ್ನು ಜಗತ್ತಿಗೇ ನೀಡುವ ವನಸುಮದ ಅದ್ಭುತ ಚಿತ್ರಣವಿದೆ. ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿ ಕುಸುಮವು ಅರಳಬೇಕೆಂಬ ಧ್ವನಿ ಇದರಲ್ಲಿದೆ. ವ್ಯಕ್ತಿ ಅರಳಿಕೊಳ್ಳಬೇಕಾದ ಬಗೆಯನ್ನು ಡಿವಿಜಿ ತರಂಗವಲಯ ಎಂಬ ವಿಶೇಷ ಶಬ್ದ ರೂಪದಲ್ಲಿ ತಿಳಿಸಿದ್ದಾರೆ. ತಾನು, ತಾನು ಭಾಗವಾಗಿರುವ ಜಗತ್ತು ಮತ್ತು ಹೆಸರಿಲ್ಲದ ಇನ್ನೊಂದು (=ದೈವ)- ಇವು ಮೂರೂ ಆ ತರಂಗವಲಯದ ಭಾಗಗಳು ಎಂದವರು ಡಿವಿಜಿ. ಎನ್ನುತ್ತಾರೆ.
ಬದುಕಿನಲ್ಲಿ ಎರಡು ರಸಗಳ ಪಾತ್ರ ಮಹತ್ವದ್ದು. ಒಂದು, ತನು ಪೋಷಣೆಗೆ ಅನ್ನರಸ; ಇನ್ನೊಂದು, ಮನಸಿನ ಪೋಷಣೆಗೆ ಅನುರಾಗ ರಸ. ಇದು ಡಿವಿಜಿ ಪ್ರತಿಪಾದಿಸಿದ ಪ್ರೀತಿಯ ಅದ್ಭುತ ಸಾಧ್ಯತೆ. ನಾವು ನಾವು ಎಂದುಕೊಂಡಾಗ ಮನೆಯ ಆವರಣ ಮೂಡುತ್ತದೆ. ಈ ಗೃಹದ ಸೌರಭದಿಂದ ಮಮತೆ ಚಿಗುರುತ್ತದೆ. ಮಮತೆಯ ತೃಪ್ತಿಗಾಗಿ ನಮ್ಮ ನಂಟರು ಇಷ್ಟರು ಎಲ್ಲ ಗೃಹದ ಕಕ್ಷೆಗೆ ಸೇರುತ್ತಾರೆ. ಇದು ಕುಟುಂಬದ ಚೌಕಟ್ಟಿನದಾದರೆ ನಮ್ಮ ಸಮಸ್ತ ಜನತೆಯ ಪೋಷಣೆಗಾಗಿ ರಾಷ್ಟ್ರ ಎಂಬ ಶಬ್ದವನ್ನು ಕಲ್ಪಿಸಿಕೊಂಡಿದ್ದೇವೆ. ಇವರೆಲ್ಲರ ಕಲ್ಯಾಣ ಚಿಂತನೆ ಮೂಡುವುದನ್ನು ಡಿವಿಜಿ ಹೃದಯ ವಿಜ್ಞಾನ ಎನ್ನುತ್ತಾರೆ.
ಬೆಳೆಯುತ್ತಿರುವವರೆಲ್ಲ ನಮ್ಮ ಬಂಧುಗಳು, ಮಕ್ಕಳು ಎಂದು ಭಾವಿಸಿದಾಗ ಅಸೂಯೆಯ ನಿರ್ಮೂಲನ ಸಾಧ್ಯ. ಅನುರಾಗದ ಚಿಗುರು ಬೆಳೆಯುವುದು ಇಂಥ ಸಮಾಹಿತ ಚಿತ್ತಗಳಲ್ಲಿ. ಇಂಥ ಚಿತ್ತ ವಿಸ್ತಾರಕ್ಕೆ ಅಗತ್ಯವಾದ ಕಸಿ ಮಾಡಿಕೊಳ್ಳಲು ಡಿವಿಜಿ ಸೃಷ್ಟಿಸಿದ ಪರಿಕಲ್ಪನೆಯೆಂದರೆ ಆತ್ಮನೇಮ. ಅದೊಂದು ಆಪ್ತ ಶಬ್ದ. ಹೀಗೆ ಮನುಷ್ಯನ ನಿಜವಾದ ವಿಕಾಸಕ್ಕೆ ಅವರು ಪ್ರತಿಪಾದಿಸಿದ ಆತ್ಮನೇಮಗಳಿವು-
- ಸತತಂ ಸಾರ್ವಜನೀನ ದೃಷ್ಟಿ
- ನಯದಿಂದೋರೋರ್ವನುಂ ವರ್ತಿಸಲ್
- ವಿತತಂ ರಾಷ್ಟ್ರಿಕರೊಳ್ ಸಮಂತಿರೆ ಕುಟುಂಬೌಪಮ್ಯದೈಕ್ಯಾದರಂ
- ಮತಿಯೊಳ್ ಸೂಕ್ಷ್ಮ ವಿಚಾರ ಜಾಗರತೆ/ನೀತಿ ಶ್ರದ್ಧೆಗಳ್ ಕೂಡಿರಲ್…. ಹಿತಮುಂ ಶಾಶ್ವತಮುಂ ಸ್ವತಂತ್ರ ಫಲಮುಂ
ಈ ನಾಲ್ಕು ಆತ್ಮನೇಮಂಗಳಿಂ.
ಡಿವಿಜಿಯವರ ಚಿಂತನೆಯ ಕ್ರಮ ಆರೋಗ್ಯಶೀಲವಾದದ್ದು. ಅವರು ಯಾವುದನ್ನೂ ಗೌಣವೆಂದು ತಿಳಿದವರಲ್ಲ. ಎಲ್ಲವೂ ಅಗತ್ಯ ಹದದಲ್ಲಿ ಬೆರೆತು ಆತ್ಮದ ಬೆಳವಣಿಗೆಗಾಗಿ ದುಡಿಯಬೇಕು ಎಂಬ ಆರೋಗ್ಯಕರ ದೃಷ್ಟಿ ಹೊಂದಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಭವಭೂತಿಯ ಉತ್ತರ ರಾಮ ಚರಿತೆಯ ಒಂದು ಪದ್ಯ ಡಿವಿಜಿಗೆ ತುಂಬಾ ಪ್ರಿಯವಾಗಿತ್ತು. ರಾಮನು ರಾವಣನನ್ನು ಕೊಂದು ಸೀತೆಯನ್ನು ಹಿಂದಕ್ಕೆ ಕರೆತರುವಾಗಿನ ದೃಶ್ಯವಿದು. ಪುಷ್ಪಕ ವಿಮಾನದಲ್ಲಿ ಕುಳಿತು ರಾಮನು ಪಂಚವಟಿಯ ಪ್ರದೇಶವನ್ನು ಸೀತೆಗೆ ನೆನಪಿಸಿಕೊಡುತ್ತಾ ಇದ್ದ ಸಂದರ್ಭದ ಪದ್ಯ ಇದು. ಪುರಾಯತ್ರ ಸ್ರೋತಃ ಪುಲಿನ ಮಧುನಾ… ನಿವೇಶಶ್ಶೈಲಾನಾಂ ತದಿದಮಿತಿ ಬುದ್ಧಿರ್ದೃಢಯತಿ ಎಂಬ ಈ ಪದ್ಯ ಪ್ರಸಿದ್ಧವಾಗಿದೆ. ‘ಸೀತೆ, ನೋಡು ಹಿಂದೆ ನದಿ ಹರಿಯುತ್ತಿತ್ತಲ್ಲ ಅಲ್ಲಿ ಈಗ ಬರೀ ಮರಳು ಹರಡಿಕೊಂಡಿದೆ. ಕಾಡಿದ್ದ ಭಾಗವೆಲ್ಲ ಈಗ ವೃಕ್ಷಪುಷ್ಟಿಯನ್ನು ಕಳೆದುಕೊಂಡಿದೆ. ಕಾಲಘಟ್ಟದಲ್ಲಿ ಹೀಗೆ ಎಲ್ಲವೂ ಬದಲಾಗುತ್ತದೆ. ಆದರೆ ಇಲ್ಲಿ ಬೆಟ್ಟವಿದೆಯಲ್ಲ, ಅದು ಮಾತ್ರ ಯಾವುದೇ ಬದಲಾವಣೆ ಹೊಂದದೆ ಎಂದಿನಂತೆಯೇ ಇದೆ’ ಎನ್ನುವುದು ಇದರ ಅರ್ಥ.
ಡಿವಿಜಿ ಕೂಡ ಅಂಥ ಬದಲಾಗದ ಬೆಟ್ಟ. ಮೌಲ್ಯವರ್ಧಕ ಧಾತುಗಳಿಂದ ಕಂಗೊಳಿಸುವ ಪರ್ವತ ಅವರು. ಕುವೆಂಪು ಅವರು ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ಕ್ಕೆ ಹಸ್ತಕ್ಕೆ ಬರೆ ನಕ್ಕೆ, ಓದುತ್ತ ಓದುತ್ತ/ಮಸ್ತಕಕ್ಕಿಟ್ಟು ಗಂಭೀರನಾದೆ/ ವಿಸ್ತರದ ದರ್ಶನಕೆ ತುತ್ತ ತುದಿಯಲಿ ನಿನ್ನ /ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ ಎಂದು ಕೈ ಮುಗಿದ ರೀತಿ ಅನುಕರಣೀಯ. ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗಗಳೆರಡೂ ಡಿವಿಜಿಯವರ ಲೋಕ ಚಿಂತನೆಯ ಫಲಗಳು.
ನಿಮ್ಮ ಸೃಜನಶೀಲತೆಯ ಹಿಂದಿನ ಒತ್ತಡ ಯಾವುದು? ಎಂದು ಖ್ಯಾತ ಇಂಗ್ಲಿಷ್ ಲೇಖಕ ಡಿ.ಎಚ್. ಲಾರೆನ್ಸ್ನನ್ನು ಪ್ರಶ್ನಿಸಿದಾಗ ಆತ One writes out of one’s moral sense -for the race as it were ಎಂದನಂತೆ. ಅಂದರೆ ಬರಹಗಾರರಲ್ಲಿ ನೈತಿಕ ಪ್ರಜ್ಞೆ ಮತ್ತು ಸಮಾಜದ ಸೌಖ್ಯ ಚಿಂತನೆ ಅಗತ್ಯ ಎಂದಂತಾಯಿತು. ಡಿವಿಜಿ ಬದುಕು ಈ ಎರಡು ತತ್ವಗಳ ಭಾಷ್ಯ. ಆದರೆ ಇದರ ಬಗೆಗೆ ಅವರು ಕೊಚ್ಚಿಕೊಳ್ಳುವ ಸ್ವಭಾವದವರಲ್ಲ. ಅವರು ಹೊಲಿ ನಿನ್ನ ತುಟಿಗಳನು ಎಂದು ಮೌನದ ಹಿರಿಮೆಯನ್ನು ಎತ್ತಿ ಹಿಡಿದವರು. ಮೌನವು ಆತನ ಮಾತೃಭಾಷೆ ಎಂದ ಆಲಿವರ್ ಗೋಲ್ಡ್ಸ್ಮಿತ್ ಮತ್ತು That man’s silence is wonderful to listen ಎಂದ ಥಾಮಸ್ ಹಾರ್ಡಿಗಳ ಪಂಥವೇ ಡಿವಿಜಿಯವರದೂ ಆಗಿದೆ.
ಕವಿಯ ಚಿಂತನೆಗೆ ಮೆರಗು ಬರುವುದು ಅವನು ತನ್ನನ್ನು ಮೆರೆಸಿಕೊಳ್ಳುವುದನ್ನು ಬಿಟ್ಟು ಲೋಕಪ್ರತಿಭೆಯನ್ನು ಮೂಡಿಸಿದಾಗ, ಬದುಕಿನಲ್ಲಿ ನೀತಿ ಸೂತ್ರವನ್ನು ಅನುಸರಿಸಿದಾಗ. ಜನ ಏನೇ ಹೇಳಲಿ, ಹೊಗಳಿ ಹಾಡಲಿ, ಆಕ್ಷೇಪಿಸಲಿ ಈ ನೀತಿ ಸೂತ್ರಪಾಲನೆ ಮುಖ್ಯ ಎನ್ನುತ್ತಿದ್ದವರು ಡಿವಿಜಿ. ಅವರಿಗೆ ತುಂಬ ಪ್ರಿಯವಾಗಿದ್ದ ಭರ್ತೃಹರಿಯ ಪದ್ಯವೊಂದಿತ್ತು. ಅದನ್ನು ಸ್ವತಃ ಅವರೇ ನೀತಿ ಶಾಸ್ತ್ರಜ್ಞರು ಭೂಷಿಸಲಿ, ದೂಷಿಸಲಿ; ಸಂಪತ್ತು ಬರಲಿ, ಹೋಗಲಿ; ಮರಣವೀಗಲೇ ಆಗಲಿ, ಇನ್ನೆಂದೇ ಆಗಲಿ; ಧೀರರು ನ್ಯಾಯ ಮಾರ್ಗದಿಂದ ತಪ್ಪುವುದಿಲ್ಲ ಎಂದು ಗದ್ಯಾನುವಾದ ಮಾಡಿದ್ದರು. ಇದಕ್ಕೆ ತಕ್ಕಂತೆ ಬಾಳಿನಲ್ಲೂ ಕೃತಿಯಲ್ಲೂ ಇದ್ದವರು ಬೇರಾರೂ ಅಲ್ಲ, ಸ್ವತಃ ಡಿವಿಜಿಯವರೇ!
ಇದು ಮಾರ್ಚ್ ೧೭, ೨೦೧೨ ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದರ ಸಂಪೂರ್ಣ ಕಾಪಿರೈಟ್ಸ್ ಅವ್ರಲ್ಲಿಯೇ ಇರುತ್ತದೆ, ಕೇವಲ ಓದುವ ಸಲುವಾಗಿ ಇಲ್ಲಿ ಪ್ರಕಟಿಸಲಾಗಿದೆ
This article was published by Vijaya Karnataka daily newspaper on Mar 17,2012 to mark 125th birthday of DVG. We don’t hold any copyrights for this article and we have published just for the benefit of the readers.